ನವದೆಹಲಿ: ತಮಿಳುನಾಡಿಗೆ ನೀರು ಬಿಡಲು ಕರ್ನಾಟಕ ಸರ್ಕಾರಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ ನೀಡಿದೆ. ದಿನಕ್ಕೆ 10 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ತಿಳಿಸಿದೆ.
ದಿನಕ್ಕೆ 10 ಸಾವಿರ ಕ್ಯೂಸೆಕ್ನಂತೆ ಹದಿನೈದು ದಿನಗಳ ಕಾಲ ತಮಿಳುನಾಡಿಗೆ ನೀರು ಬಿಡಲು ಪ್ರಾಧಿಕಾರ ಹೇಳಿದೆ. ಆದರೆ ಪ್ರಾಧಿಕಾರದ ಆದೇಶಕ್ಕೆ ಕರ್ನಾಟಕ ಒಪ್ಪಿಗೆ ಸೂಚಿಸಿಲ್ಲ. ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಈ ಹಿನ್ನೆಲೆ ಆಗಸ್ಟ್ 22 ರ ವರೆಗೂ ನಿತ್ಯ 8,000 ಕ್ಯೂಸೆಕ್ ನೀರು ಬಿಡುವುದಾಗಿ ಕರ್ನಾಟಕ ತಿಳಿಸಿದೆ.
ನಿತ್ಯ 15 ಸಾವಿರ ಕ್ಯೂಸೆಕ್ ನೀರಿಗಾಗಿ ತಮಿಳುನಾಡು ಬೇಡಿಕೆ ಇಟ್ಟಿತ್ತು. ನೀರು ಬಿಡದಿದ್ದರೆ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವುದಾಗಿ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆ ಕನಿಷ್ಠ 10 ಸಾವಿರ ಕ್ಯೂಸೆಕ್ ನೀರು ಬಿಡಲು ಪ್ರಾಧಿಕಾರ ಸೂಚನೆ ನೀಡಿತ್ತು.
ನೀರಿನ ಅಭಾವ ಹಿನ್ನೆಲೆ ನಿತ್ಯ 8,000 ಕ್ಯೂಸೆಕ್ ಬಿಡುವುದಾಗಿ ಕರ್ನಾಟಕ ಹೇಳಿತ್ತು. ಹೀಗಾಗಿ ಕರ್ನಾಟಕದ ವಿರುದ್ಧ ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ ಎನ್ನಲಾಗಿದೆ.